ಚ ಕಿತ್ತೂರು : ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಸ್ಥಳೀಯ ಶಾಸಕರು ಹಾಗು ಕ್ಷೇತ್ರ ಶಿಕ್ಷಣಾಧಿಕಾರಿಗಳು ಭಗೀರಥ ಪ್ರಯತ್ನ ನಡೆಸಿದ್ದಾರೆ.ಸಂಜೆ ಟಿ,ವಿ, ಮತ್ತು ಮೊಬೈಲ್ ಗಳನ್ನು ಬಂದ್ ಮಾಡುವಂತೆ ಶಿಕ್ಷಣ ಇಲಾಖೆ ಸುತ್ತೋಲೆಯನ್ನೂ ಹೊರಡಿಸಿದ್ದು ಅದು ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ.
ವಿದ್ಯಾರ್ಥಿಗಳು ಓದುವ ಸಮಯದಲ್ಲಿ ಅವರಿಗೆ ತೊಂದರೆಯಾಗದಂತೆ ಸಂಜೆ 7 ಗಂಟೆಯ ನಂತರ ಟಿ ವಿ ಹಾಗು ಮೊಬೈಲ್ ಳನ್ನು ಬಂದ್ ಮಾಡಿ ಅವರಿಗೆ ಓದಲು ಪ್ರೋತ್ಸಾಹಿಸುವಂತೆ ಶಿಕ್ಷಕರು ಮನೆ ಮನೆಗೆ ತೆರಳಿ ಪಾಲಕರಿಗೆ ತಿಳುವಳಿಕೆ ನೀಡುವ ಕಾರ್ಯಕ್ರಮ ಕೈಗೊಂಡಿರುವ ಶಿಕ್ಷಣ ಇಲಾಖೆಯ ಯೋಜನೆಗೆ ಪಾಲಕರು, ಪೋಷಕರು ಹಾಗು ಸಾರ್ವಜನಿಕರು ಸಂತೋಷ ವ್ಯಕ್ತಪಡಿಸಿ ಸ್ವಾಗತಿಸಿದ್ದು ಕಂಡುಬರುತ್ತಿದೆ.
ಕಳೆದ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದು ಕಿತ್ತೂರು ತಾಲೂಕು, ಬೆಳಗಾವಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದು, ಈ ಬಾರಿ ಇನ್ನೂ ಉತ್ತಮ ಸಾಧನೆಗೈಯಲು ಪೂರ್ವ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.
ವಿದ್ಯಾರ್ಥಿಗಳಿಗೆ ಬೇಕಾದ ಅವಶ್ಯಕ ಪಠ್ಯ ಪುಸ್ತಕ ಪೂರೈಸುವುದು, ವಿಶೇಷ ತರಬೇತಿ ನೀಡುವುದು, ತಜ್ಞರಿಂದ ಸಲಹಾ ಕಾರ್ಯಾಗಾರ ನಡೆಸುವುದು, ಪ್ರೇರಣಾತ್ಮಕ ಭಾಷಣ ಏರ್ಪಡಿಸುವುದು,ಆಯ್ದ 50 ಜಾಣ ವಿದ್ಯಾರ್ಥಿಗಳಿಗೆ ವಸತಿ ಊಟೋಪಚಾರಗಳನ್ನು ನೀಡಿ ವಿಷಯ ತಜ್ಞರಿಂದ 40 ದಿನಗಳ ತರಬೇತಿ ಶಿಬಿರ ಏರ್ಪಡಿಸಿ 625 ಕ್ಕೆ 625 ಅಂಕಗಳಿಸುವ ಗುರಿ ಸಾಧನೆಯಂತಹ ಹತ್ತು ಹಲವು ನೂತನ ಕಾರ್ಯಮಗಳನ್ನು ಮಾಡುತ್ತಿರುವ ಶಾಸಕರು ಹಾಗು ಶಿಕ್ಷಣ ಇಲಾಖೆಯ ಯೋಜನೆಗಳಿಗೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸುವುದರ ಜೊತೆಗೆ ಸಂಪೂರ್ಣ ಸಹಕಾರ ನೀಡಲು ಮುಂದಾಗಿದ್ದಾರೆ.
ಶಿಕ್ಷಣ ಪ್ರೇಮಿ ಶಾಸಕರಾದ ಬಾಬಾಸಾಹೇಬ ಪಾಟೀಲ ಹಾಗು ಕ್ಷೇತ್ರ ಶಿಕ್ಷಣಾಧಿಕಾರಿ ಸಿ,ವಾಯ್, ತುಬಾಕಿ ಅವರ ವಿಶೇಷ ಮುತುವರ್ಜಿಯಿಂದ ಮಾಡುತ್ತಿರುವ ಈ ಪ್ರಯತ್ನ ಫಲ ನೀಡುವಂತೆ ಎಲ್ಲ ಶಿಕ್ಷಕ ಸಮುದಾಯವೂ ಆಸಕ್ತಿವಹಿಸುವುದರ ಜೊತೆಗೆ ತಮ್ಮ ಸೇವಾವಧಿ ಮೀರಿ ಶ್ರಮಿಸುತ್ತಿದ್ದಾರೆ.
ಈ ಬಾರಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳಲೇಬೇಕು ಎಂಬ ಸಾಧನೆಗೈಯುವ ಹುಮ್ಮಸ್ಸಿನಿಂದ ಮುನ್ನುಗ್ಗುತ್ತಿರುವ ಈ ಈರ್ವರೂ ಭಗೀರಥರು
ಇಲ್ಲಿಯವರೆಗೆ ಸಾಧಿಸಲಾಗದ ಶೈಕ್ಷಣಿಕ ಪ್ರಗತಿಯನ್ನು ಈಗ ಶತಾಯ ಗತಾಯ ಸಾಧಿಸಿಯೇ ತೋರಬೇಕೆಂದು ತೊಡೆತಟ್ಟಿ ನಿಂತಿದ್ದಾರೆ. ಇವರ ಪ್ರಯತ್ನಕ್ಕೆ ವಿದ್ಯಾರ್ಥಿಗಳು ಯಾವ ರೀತಿ ಸ್ಪಂದಿಸುತ್ತಾರೆ ಎಂದು ಕಾದು ನೋಡೋಣ.
0 Comments