kittur vijay news.ಬೆಳಗಾವಿ ಕೇಂದ್ರ ನಿಲ್ದಾಣದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂತನ 250 ಬಸ್ಸುಗಳ ಲೋಕಾರ್ಪಣೆ

ಶಕ್ತಿ, ಗೃಹಲಕ್ಷ್ಮೀ ಯೋಜನೆಗಳು ಮಹಿಳಾ ಸಬಲೀಕರಣ, ಸ್ವಾಭಿಮಾನದ ಸಂಕೇತ : ಲಕ್ಷ್ಮೀ ಹೆಬ್ಬಾಳಕರ್

ಗ್ರಾಮೀಣ ಜನರ ಆರ್ಥಿಕ ಸಬಲೀಕರಣಕ್ಕೆ ಸರಕಾರಿ ಬಸ್ ಹಾಗೂ ಸಿಬ್ಬಂದಿ ಕೊಡುಗೆ ಅನನ್ಯ ಎಂದ ಸಚಿವರು


ಬೆಳಗಾವಿ : ರಾಜ್ಯದ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಶಕ್ತಿ ಮತ್ತು ಗೃಹಲಕ್ಷ್ಮೀ ಯೋಜನೆಗಳು ಮಹಿಳೆಯರ ಸ್ವಾಭಿಮಾನ ಮತ್ತು ಸಬಲೀಕರಣದ ಸಂಕೇತಗಳಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂತನ ಬಸ್ಸುಗಳ ಲೋಕಾರ್ಪಣೆ ಹಾಗೂ ಬೆಳಗಾವಿ-1ನೇ ಘಟಕದ ನವೀಕರಣ ಕಾಮಗಾರಿಯ ಶಂಕುಸ್ಥಾಪನೆ ಮತ್ತು ಹೊಸದಾಗಿ ನೇಮಕಾತಿ ಹೊಂದಿದ ಸಿಬ್ಬಂದಿಗೆ ಆದೇಶ ಪತ್ರ ವಿತರಣೆ, ಅಪಘಾತ/ಅಪರಾಧ ರಹಿತ ಸೇವೆ ಸಲ್ಲಿಸಿದ ಸಂಸ್ಥೆಯ ಚಾಲನಾ ಸಿಬ್ಬಂದಿಗೆ ಬೆಳ್ಳಿ ಪದಕ ವಿತರಣೆ ಹಾಗೂ ನೂತನ ತಂತ್ರಾಂಶಗಳ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. 

ಗ್ರಾಮೀಣ ಮಹಿಳೆಯರ ಸಶಕ್ತೀಕರಣಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೊಡುಗೆ ಬಹಳ ದೊಡ್ಡದಿದೆ. ಗ್ರಾಮೀಣ ಜನರ ಆರ್ಥಿಕ ಸಬಲೀಕರಣಕ್ಕೆ ಕೂಡ ಬಸ್ ಗಳ ಕೊಡುಗೆ ಮಹತ್ವದ್ದಾಗಿದೆ ಎಂದು ಅವರು ಹೇಳಿದರು. 
 
 ಸಾರಿಗೆ ವ್ಯವಸ್ಥೆ ಎಂದರೆ ಕೇವಲ ಒಂದು ಇಲಾಖೆಯ ಕಾರ್ಯವಲ್ಲ, ಅದು ಜನಜೀವನದ ಭಾಗ, ಜನಸಾಮಾನ್ಯರ ಜೀವನಾಡಿ ಇದ್ದಂತೆ. ಕಳೆದ 28 ವರ್ಷಗಳಿಂದ ಈ ಸಂಸ್ಥೆ ಲಕ್ಷಾಂತರ ಜನರ ವಿಶ್ವಾಸವನ್ನು ಗಳಿಸಿದೆ. ಒಬ್ಬ ವಿದ್ಯಾರ್ಥಿನಿಯ ಶಿಕ್ಷಣದ ಕನಸು, ಒಬ್ಬ ಕಾರ್ಮಿಕನ ದುಡಿಯುವ ಬದುಕು ಇವೆಲ್ಲವನ್ನು ಗಮ್ಯಸ್ಥಾನಕ್ಕೆ ಕೊಂಡೊಯ್ಯುವ ಸೇತುವೆಯೇ ನಮ್ಮ ಸಾರಿಗೆ ವ್ಯವಸ್ಥೆ. ಭರವಸೆ, ಸುರಕ್ಷತೆ ಮತ್ತು ಸಮಯಪಾಲನೆಯನ್ನು ಸಾಗಿಸುವ ಸೇವಾ ಸಂಸ್ಥೆ ಎಂದು ಕೊಂಡಾಡಿದ ಸಚಿವರು, ಇಂದು ಲೋಕಾರ್ಪಣೆಯಾಗುತ್ತಿರುವ ನೂತನ ಬಸ್ಸುಗಳು ಕೇವಲ ಹೊಸ ವಾಹನಗಳಲ್ಲ. ಅವು ಅಭಿವೃದ್ಧಿಯ ಚಕ್ರಗಳು. ಗ್ರಾಮದಿಂದ ನಗರಕ್ಕೆ, ನಗರದಿಂದ ಗ್ರಾಮಕ್ಕೆ ಜನರನ್ನು ಸಂಪರ್ಕಿಸುವ ಅಭಿವೃದ್ಧಿಯ ಮಾರ್ಗಗಳು ಎಂದು ಹೇಳಿದರು.

 ಒಂದು ಬಸ್ ರಸ್ತೆ ಮೇಲೆ ಓಡುತ್ತಿರುವಾಗ ಅದು ಕೇವಲ ಪ್ರಯಾಣಿಕರನ್ನು ಮಾತ್ರ ಸಾಗಿಸುವುದಿಲ್ಲ, ಅದು ಕನಸುಗಳನ್ನು ಸಾಗಿಸುತ್ತದ, ಆಸೆಗಳನ್ನು ಸಾಗಿಸುತ್ತದೆ, ಬದುಕಿನ ಅವಕಾಶಗಳನ್ನು ಸಾಗಿಸುತ್ತದೆ. ನಮ್ಮ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ ಮಹಿಳೆಯರ ಬದುಕಿನಲ್ಲಿ ನಿಜವಾದ ಬದಲಾವಣೆ ತಂದಿದೆ. ರಾಜ್ಯದಲ್ಲಿನ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸುವ ಮೂಲಕ, ಅವರ ಆರ್ಥಿಕ ಸ್ವಾವಲಂಬನೆಗೆ ದೊಡ್ಡ ಬೆಂಬಲ ನೀಡಲಾಗಿದೆ. ಇದರಿಂದ ಲಕ್ಷಾಂತರ ಮಹಿಳೆಯರು ತಮ್ಮ ಕುಟುಂಬದ ಆರ್ಥಿಕ ಭಾರವನ್ನು ಕಡಿಮೆ ಮಾಡುತ್ತಿದ್ದಾರೆ. ಇದರೊಂದಿಗೆ ಗೃಹಲಕ್ಷ್ಮೀ ಯೋಜನೆ ಸಹ ಮಹಿಳೆಯರ ಸ್ವಾಭಿಮಾನಕ್ಕೆ ಕಾರಣವಾಗಿದೆ ಎಂದರು.
 

 ಮಹಿಳಾ ಸಬಲೀಕರಣದ ಸರ್ಕಾರದ ಬದ್ಧತೆಯ ಸಾಕ್ಷಿಯಾಗಿರುವ ಶಕ್ತಿ ಯೋಜನೆ ಯಶಸ್ವಿಯಾಗಲು ಸಾರಿಗೆ ಸಂಸ್ಥೆಯ ಸಿಬ್ಬಂದಿ ಮಹತ್ತರ ಪಾತ್ರ ವಹಿಸಿದ್ದಾರೆ. ಪ್ರತಿ ದಿನ ಲಕ್ಷಾಂತರ ಮಹಿಳೆಯರನ್ನು ಗೌರವದಿಂದ, ಸುರಕ್ಷಿತವಾಗಿ ಸಾಗಿಸುತ್ತಿರುವ ಚಾಲಕರು ಮತ್ತು ನಿರ್ವಾಹಕರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಸಾರಿಗೆ ಸಿಬ್ಬಂದಿಯ ಸೇವಾಭಾವನೆ ಬಿಸಿಲು, ಮಳೆ, ಹಗಲು-ರಾತ್ರಿ ಎಂಬ ವ್ಯತ್ಯಾಸವಿಲ್ಲದೆ ಜನಸೇವೆಯನ್ನು ಮುಂದುವರಿಸುತ್ತಿರುವ ನಮ್ಮ ಸಿಬ್ಬಂದಿ ಕಾರ್ಯ ನಿಜಕ್ಕೂ ಪ್ರಶಂಸನೀಯರು. ಅವರ ಶ್ರಮದಿಂದಲೇ ಈ ಸಂಸ್ಥೆ ಇಷ್ಟು ವರ್ಷಗಳಿಂದ ವಿಶ್ವಾಸವನ್ನು ಗಳಿಸಿದೆ. ನಿಮ್ಮ ಕುಟುಂಬದ ಬಗೆಗೂ ಕಾಳಜಿ ವಹಿಸಿ ಎಂದು ಹೆಬ್ಬಾಳಕರ್ ಹೇಳಿದರು.

ಚೆನ್ನಮ್ಮ ಹೆಸರಿಡಿ
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ ಎಂದು ನಾಮಕರಣ ಮಾಡಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ್ ಸಚಿವ ರಾಮಲಿಂಗಾ ರೆಡ್ಡಿ ಅವರಲ್ಲಿ ವಿನಂತಿಸಿದರು. 
 
 ರಾಮಲಿಂಗಾ ರೆಡ್ಡಿ ಅವರು ಸಾರಿಗೆ ಇಲಾಖೆಯ ಸಾರಥ್ಯ ವಹಿಸಿಕೊಂಡ ನಂತರ ಇಲಾಖೆಯಲ್ಲಿ ಸಾಕಷ್ಟು ಹೊಸತನವನ್ನು ತಂದಿದ್ದಾರೆ. ರಾಜ್ಯಾದ್ಯಂತ 7,800 ಹೊಸ ಬಸ್ ಗಳನ್ನು ಒದಗಿಸಿದ್ದಾರೆ. ಜನರ ಪ್ರಯಾಣ ಸುಖಕರವಾಗಿರುವಂತೆ ನೋಡಿಕೊಳ್ಳಲು ಏನು ಬೇಕೋ ಅದನ್ನೆಲ್ಲ ಮಾಡುತ್ತಿದ್ದಾರೆ. ಶಕ್ತಿ ಯೋಜನೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲು ರಾಮಲಿಂಗಾ ರಡ್ಡಿ ಅವರ ಶ್ರಮ ಕಾರಣ ಎಂದ ಸಚಿವರು, ನಮ್ಮ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಹೆಚ್ಚು ಬಡವರಿರುವ ಕ್ಷೇತ್ರ, ಕಾರಿನಲ್ಲಿ ಓಡಾಡುವವರ ಸಂಖ್ಯೆ ತೀರಾ ಕಡಿಮೆ ಇದೆ. ಸುವರ್ಣ ವಿಧಾನಸೌಧ ನಿರ್ಮಾಣ ಸೇರಿದಂತೆ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ತಮ್ಮ ಜೀವನಾಧಾರವಾಗಿದ್ದ ಜಮೀನನ್ನೇ ಬಿಟ್ಟುಕೊಟ್ಟ ತ್ಯಾಗಿಗಳು. ಆದರೆ ಬಹಳಷ್ಟು ಹಳ್ಳಿಗಳಿಗೆ ಬಸ್ ಗಳ ಕೊರತೆ ಇದೆ, 
ಆದಷ್ಟು ಗ್ರಾಮೀಣ ಪ್ರದೇಶಕ್ಕೆ ಬೇಡಿಕೆ ಇರುವಷ್ಟು ಹೊಸ ಬಸ್ ಗಳನ್ನು ನೀಡುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ವಿನಂತಿಸಿದರು. 

ಮಂಗಳಾರತಿಮಾಡಿಸಿಕೊಂಡ ಬಿಜೆಪಿ

ಬಿಜೆಪಿಯವರಿಗೆ ಕೆಲಸವಿಲ್ಲ, ಧಾರವಾಡದಲ್ಲಿ ಯುವಕರ ದಿಕ್ಕು ತಪ್ಪಿಸಿ, ಸರಕಾರದ ವಿರುದ್ಧ ಹೋರಾಟ ಮಾಡಲು ಹೋಗಿ ಮುಖಕ್ಕೆ ಮಂಗಳಾತಿ ಮಾಡಿಸಿಕೊಂಡರು. ಅವರ ಅಧಿಕಾರ ಅವಧಿಯಲ್ಲಿ ಒಂದೇ ಒಂದು ಹೊಸ ಬಸ್ ಖರೀದಿಸಲಿಲ್ಲ. ರಾಮಲಿಂಗ ರೆಡ್ಡಿ ಅವರು 7,800 ಬಸ್ ಖರೀದಿಸಿದ್ದಾರೆ. ಇದು ಜನಪರ ಕಾರ್ಯಕ್ರಮವಾ? ಇದು ಜನವಿರೋಧಿ ಕಾರ್ಯಕ್ರಮವಾ? ಈಗ ಸಾರಿಗೆ ಇಲಾಖೆಯಲ್ಲಿ 10 ಸಾವಿರ ನೇಮಕಾತಿ ಮಾಡಲಾಗುತ್ತಿದೆ. ರಾಮಲಿಂಗಾ ರೆಡ್ಡಿ ಅವರು ಕೆಲಸ ಮಾಡಿದ ಪ್ರತಿ ಇಲಾಖೆಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. 
 ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸಿದರು. ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ, ಸಂಸ್ಥೆಯ ಚೇರಮನ್, ಶಾಸಕ ರಾಜು ಕಾಗೆ, ಉಪಾಧ್ಯಕ್ಷ ಸುನಿಲ್ ಹನಮಣ್ಣವರ್, ಶಾಸಕರಾದ ಆಸಿಫ್ ಸೇಠ್, ವಿಠ್ಠಲ ಹಲಗೇಕರ್, ಬಾಬಾಸಾಹೇಬ ಪಾಟೀಲ, ಬುಡಾ ಅಧ್ಯಕ್ಷರಾದ ಲಕ್ಷ್ಮಣರಾವ್ ಚಿಂಗಳೆ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ ಎಂ, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ವಿನಯ ನಾವಲಗಟ್ಟಿ, ನಗರ ಪೋಲಿಸ್ ಆಯುಕ್ತರಾದ ಭೂಷಣ್ ಗುಲಾಬರಾವ್ ಬೋರಸೆ, ಪೋಲಿಸ್ ಅಧೀಕ್ಷರಾದ ಕೆ.ರಾಮರಾಜನ್, ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ, ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್ ಸಿಂಧೆ, ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Post a Comment

0 Comments