ಕಿತ್ತೂರು ವಿಜಯ ಸುದ್ದಿ ಕಿತ್ತೂರು:- ಕರ್ನಾಟಕದ ಪ್ರಮುಖ ಹೋರಾಟಗಾರರಾಗಿದ್ದ ಶ್ರೀ ಅರಟಾಳ ರುದ್ರಗೌಡರು ಬ್ರಿಟೀಷ್ ಆಡಳಿತದ ವಿರುದ್ಧ ಹೋರಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ ಮಹಾನುಭಾವರು ಎಂದು ಚನ್ನಮ್ಮನ ಕಿತ್ತೂರಿನ ಎಸ್.ಬಿ.ಎಂ ಸರಕಾರಿ ಹೆಣ್ಣುಮಕ್ಕಳ ಪ್ರೌಢ ಶಾಲೆಯ ಉಪ ಪ್ರಾಂಶುಪಾಲರಾದ ಶ್ರೀ ಮಹೇಶ ಚನ್ನಂಗಿಯವರು ತಿಳಿಸಿದರು. ಅವರು ಕಿತ್ತೂರಿನ ಕಲ್ಮಠದ ಶ್ರೀ ಶಂಕರ ಚಂದರಗಿ ಸಭಾ ಭವನದಲ್ಲಿ ರಾಜಗುರು ಸಂಸ್ಥಾನ ಕಲ್ಮಠ ಮತ್ತು ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ "ಶ್ರೀ ರಾವ ಬಹದ್ದೂರ ಅರಟಾಳ ರುದ್ರಗೌಡರ ಕೊಡುಗೆಗಳು" ಕುರಿತು ಉಪನ್ಯಾಸ ನೀಡುತ್ತ ಅರಟಾಳ ರುದ್ರಗೌಡರು ಸಮಾಜದ ಅಭಿವೃದ್ಧಿಗಾಗಿ ಕೈಗೊಂಡ ಕೊಡುಗೆಗಳನ್ನು ಗಮನಿಸಿದ ಬ್ರಿಟಿಷ್ ಸರಕಾರವು ಇವರಿಗೆ ಸರ್ ಮತ್ತು ರಾವ ಬಹದ್ದೂರ್ ಬಿರುದುಗಳನ್ನು ನೀಡಿ ಗೌರವಿಸಿರುವದು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿರುವದಕ್ಕೆ ಸಂತಸ ವ್ಯಕ್ತ ಪಡಿಸಿದರು.ಲೋಕಮಾನ್ಯ ಟಿಳಕ್, ಮಹಾತ್ಮಾ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ ಇವರುಗಳಿಗಿಂತ ವಯಸ್ಸಿನಲ್ಲಿ ಹಿರಿಯರಾಗಿದ್ದ ಅರಟಾಳ ರುದ್ರಗೌಡರು ಕೇವಲ ಮೆಟ್ರಿಕ್ವರೆಗೆ ಓದಿ ಬೆಳಗಾವಿ ಉಪ ಕಲೆಕ್ಟರ್ ಆಗಿ ಡೆಪುಟಿ ಚನಬಸಪ್ಪ,ಶಿರಸಂಗಿ ಲಿಂಗರಾಜರ ಜೊತೆಗೂಡಿ ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿಯ ಹರಿಕಾರರಾಗಿ ಲಿಂಗಾಯತ ನಿಷ್ಠೆ ಹೊಂದಿದ ಧೀಮಂತ ನಾಯಕರಾಗಿದ್ದರು ಎಂಬುದನ್ನು ಸ್ಮರಿಸಿದರು.ಕಿತ್ತೂರಿನ ಸ್ಪಂದನ ಆಸ್ಪತ್ರೆಯ ಡಾ।। (ಮೇಜರ್) ಮೋಹನ ಅಂಗಡಿ ಮತ್ತು ಪತ್ರಕರ್ತರಾದ ಶ್ರೀ ಕಲ್ಲಪ್ಪ ಅಗಸಿಮನಿ ಇವರುಗಳನ್ನು ಸನ್ಮಾನಿಸಲಾಯಿತು. ಡಾ|| (ಮೇಜರ್) ಮೋಹನ ಅಂಗಡಿ ಮಾತನಾಡಿ ಸತತ ಪರಿಶ್ರಮ ಮತ್ತು ನಿರ್ಧಿಷ್ಟ ಗುರಿಯೊಂದಿಗೆ ನಮ್ಮ.ಯುವಕರು.ಕ್ರಿಯಾಶೀಲರಾದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಯಶಸ್ಸಿಗೆ ಗ್ರಾಮೀಣ ಪ್ರದೇಶ ಅಥವಾ ಕನ್ನಡ - ಇಂಗ್ಲೀಷ್ ಮಾಧ್ಯಮ ಎಂಬ ತಾರತಮ್ಯ ಇಲ್ಲ ಎಂದು ತಿಳಿಸುತ್ತ ತಮ್ಮ ಯಶಸ್ಸಿನಲ್ಲಿ ತಂದೆ ತಾಯಿಗಳ ಮತ್ತು ಗುರು ಹಿರಿಯರ ಮಾರ್ಗದರ್ಶನ ಇರುವದನ್ನು ನೆನಪಿಸಿದರು.ಸಾನಿಧ್ಯ ವಹಿಸಿದ್ದ ರಾಜಗುರು ಸಂಸ್ಥಾನ ಕಲ್ಮಠದ ಪೂಜ್ಯ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಇಂದು ಲಿಂಗಾಯತರು ಶಿಕ್ಷಣ ಪಡೆದು ಸ್ವಾಭಮಾನದಿಂದ ಬಾಳಲು ಶ್ರೀ ಅರಟಾಳ ರುದ್ರಗೌಡರ ಪರಿಶ್ರಮ ಮತ್ತು ಲಿಂಗಾಯತ ನಿಷ್ಠೆಗಳೇ ಕಾರಣವಾಗಿದ್ದು ಅವರ ಜೀವನ ಚರಿತ್ರೆಯನ್ನು ನಮ್ಮ ಯುವ ಪೀಳಿಗೆಗೆ ತಲುಪಿಸುವ ಕಾರ್ಯವಾಗಬೇಕೆಂದು ಆಶೀರ್ವದಿಸಿದರು.
ಶ್ರೀ ಈಶ್ವರ ಗಡಿಬಿಡಿ ಇವರ ವಚನ ಗಾಯನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಶ್ರೀಮತಿ ನಿಖಿತಾ ದಡ್ಡಿ ಸ್ವಾಗತಿಸಿದರು. ಕಿತ್ತೂರು ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಸ್.ಬಿ.ದಳವಾಯಿ ಪ್ರಾಸ್ತಾವಿಕ ನುಡಿಗಳ ಜೊತೆಗೆ ಅತಿಥಿಗಳನ್ನು.ಪರಿಚಯಿಸಿದರು.ವಿದ್ಯಾರ್ಥಿನಿಯರ ಶಿವನ ಕುರಿತಾದ ನೃತ್ಯ ಎಲ್ಲರನ್ನು ರಂಜಿಸಿತು. ಶ್ರೀ ಮಹೇಶ್ವರ ಹೊಂಗಲ ವಂದಿಸಿದರು. ಶ್ರೀ ರಾಜಶೇಖರ ರಗಟ ನಿರೂಪಿಸಿದರು. ಸಮಾರಂಭದಲ್ಲಿ ಹಿರಿಯರಾದ ಪ್ರೊ.ಎ.ಆರ್.ಕುಬಸದ,ಡಾ.ಎಸ್.ಪಿ.ಹಿರೇಮಠ,ಶ್ರೀಡಿ.ಆರ್.ಪಾಟೀಲ,ಶ್ರೀ ಬಸವರಾಜ ನಂದಗಡ, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು,ಮಹಿಳಾ ವೇದಿಕೆಯ ಸದಸ್ಯರು ಮತ್ತು ನಾಡಿನ ಶರಣ ಶರಣೆಯರು ಉಪಸ್ಥಿತರಿದ್ದರು.
0 Comments