ಕಿತ್ತೂರು ವಿಜಯ ಸುದ್ದಿ ಚನ್ನಮ್ಮನ ಕಿತ್ತೂರು:- ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಸೃಜನಶೀಲ ಶಿಕ್ಷಕರಿಂದ ಮಾತ್ರ ಮಕ್ಕಳ ವ್ಯಕ್ತಿತ್ವ ವಿಕಸನ ಮತ್ತು ಸ್ವಾವಲಂಬಿ ಜೀವನ ಸಾಧ್ಯ ಎಂದು ಕಿತ್ತೂರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಸ್.ಬಿ.ದಳವಾಯಿ ತಿಳಿಸಿದರು.ಅವರು ಪ್ರಸಕ್ತ ವರ್ಷದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವಿನೂತನವಾಗಿ ಹಮ್ಮಿಕೊಂಡ ಸಾಹಿತಿಗಳ ಮತ್ತು ಸಾಧಕರ ಮನೆ ಮನೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಭಿಯಾನದ ಅಡಿಯಲ್ಲಿ ಹಮ್ಮಿಕೊಳ್ಳಲಾದ ಹಿರೇನಂದಿಹಳ್ಳಿಯ ಸರಕಾರಿ ಪ್ರೌಢ ಶಾಲೆಯ ಸಮಾಜ ವಿಜ್ಞಾನ ಭಾಷಾ ಶಿಕ್ಷಕರೂ,ಕಿತ್ತೂರ ತಾಲೂಕು ಅತ್ಯುತ್ತಮ ಶಿಕ್ಷಕ ಪ್ರಶಸ್ತಿ.ಭಾಜನರೂ,ಎಸ್.ಎಸ್.ಎಲ್.ಸಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿರುವ ಶ್ರೀ ರಾಜಶೇಖರ ರಗಟ ದಂಪತಿಗಳಿಗೆ ಅವರ ಮನೆಯಲ್ಲಿ ಹಮ್ಮಿಕೊಳ್ಳಲಾದ ಸನ್ಮಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಅತ್ಯಂತ ಸರಳ ಜೀವಿಗಳಾದ ಶ್ರೀ ರಾಜಶೇಖರ ರಗಟಿಯವರು ತಮ್ಮ ಶ್ರೇಷ್ಠ ಭೋಧನೆಯಿಂದ ವಿದ್ಯಾರ್ಥಿಗಳ ಪಾಲಕರ ಮತ್ತು ಶಿಕ್ಷಣ ಅಧಿಕಾರಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶುಭ ಕೋರಿದರು. ಸಮಾರೋಪ ನುಡಿಗಳನ್ನು ಆಡಿದ ಕಿತ್ತೂರಿನ ಎಸ್.ಬಿ.ಎಂ.ಸರಕಾರಿ ಬಾಲಿಕೆಯರ ಪ್ರೌಢಶಾಲೆಯ ಉಪಪ್ರಾಂಶುಪಾಲರಾದ ಶ್ರೀ ಮಹೇಶ ಚನ್ನಂಗಿಯವರು ಕ್ರಿಯಾಶೀಲ ಶಿಕ್ಷಕರಾದ ಶ್ರೀ ರಾಜಶೇಖರ ರಗಟಿಯವರು ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಕಂಡು ತಮ್ಮ ಬೋಧನೆಯ ಮೂಲಕ ಪ್ರೋತ್ಸಾಹಿಸುತ್ತ ಇತರರಿಗೆ ಮಾದರಿಯಾಗಿದ್ದು ಇಂತಹವರನ್ನು ಗುರುತಿಸಿ ಗೌರವಿಸುತ್ತಿರುವದಕ್ಕೆ ಸಂಘಟಕರನ್ನು ಅಭಿನಂದಿಸಿದರು.ಗೌರವ ಸ್ವೀಕರಿಸಿ ಮಾತನಾಡಿದ ಶ್ರೀ ರಾಜಶೇಖರ ರಗಟಿಯವರು ಮನೆಗೆ ಬಂದು ಕಿರಿಯರಾದ ತಮ್ಮನ್ನು ಪ್ರೋತ್ಸಾಹಿಸಿರುವದು ಸಂತಸ ನೀಡಿದೆ. ಇದರಿಂದ ತಮ್ಮ ವೃತ್ತಿಗೆ ಇನ್ನಷ್ಟು ಬಲ ಬಂದಂತಾಗಿದ್ದು ಪ್ರತಿ ನಿತ್ಯ ತಮ್ಮ ಜೊತೆಗೆ ಸಹಕಾರ ನೀಡುತ್ತಿರುವ ಪತ್ನಿಯನ್ನು ಸ್ಮರಿಸುತ್ತ ಕಿತ್ತೂರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನವರಿಗೆ ಧನ್ಯವಾದ ತಿಳಿಸಿದರು. ವಿದ್ಯಾರ್ಥಿಗಳು ಆಸಕ್ತಿಯಿಂದ ಓದುವದರ ಜೊತೆಗೆ ಬರೆಯುವ ರೂಢಿ ಇಟ್ಟುಕೊಂಡರೆ ಯಶ ಕಟ್ಟಿಟ್ಟ ಬುತ್ತಿ ಎಂದು ಮಾರ್ಮಿಕವಾಗಿ ತಿಳಿಸಿದರು.
ಕುಮಾರಿ ಕೃತಿ ರಾಘವೇಂದ್ರ ಇವರ ಗೀತ ಗಾಯನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಶ್ರೀ ಮಹೇಶ್ವರ ಹೊಂಗಲ ಸ್ವಾಗತಿಸಿದರು.ಶ್ರೀ ಬಸವರಾಜ ಬಿದರಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸಾಧಕ ದಂಪತಿಗಳನ್ನು ಪರಿಚಯಿಸಿದರು. ಶ್ರೀ ಮಂಜುನಾಥ ಕಳಸಣ್ಣವರ ವಂದಿಸಿದರು.ಶ್ರೀಮತಿ ಸ್ನೇಹಾ ದೇವರಮನಿ ನಿರೂಪಿಸಿದರು. ಕಿತ್ತೂರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಶ್ರೀ ರಾಜಶೇಖರ ರಗಟಿಯವರ ಕುಟುಂಬದವರು ಮತ್ತು ಸ್ನೇಹಿತರು ಉಪಸ್ಥಿತರಿದ್ದರು.
0 Comments