ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ವಿಧಾನ ಮಂಡಲ ಚಳಿಗಾಲ ಅಧಿವೇಶನ ಮುಕ್ತಾಯ: 17 ಮಸೂದೆಗಳು ಅಂಗೀಕಾರ
ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತು ಸತತ ಮೂರು ಗಂಟೆಗಳ ಕಾಲ ನಡೆದ ಚರ್ಚೆಯ ನಂತರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ 10 ದಿನಗಳ ಚಳಿಗಾಲದ ವಿಧಾನಮಂಡಲದ ಅಧಿವೇಶನಕ್ಕೆ ತೆರೆಬಿದ್ದಿದೆ.ಡಿಸೆಂಬರ್ 4 ರಿಂದ 15 ರವರೆಗೆ 66 ಗಂಟೆಗಳ ಕಾಲ ನಡೆದ ಅಧಿವೇಶನದಲ್ಲಿ 17 ಮಸೂದೆಗಳನ್ನು ಅಂಗೀಕರಿಸಲಾಯಿತು ಮತ್ತು 150 ಗಮನ ಸೆಳೆಯುವ ಪ್ರಸ್ತಾಪಗಳನ್ನು ಮಂಡಿಸಲಾಯಿತು ಎಂದು ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ತಿಳಿಸಿದರು.
ನಿನ್ನೆ ಶುಕ್ರವಾರ ಅಧಿವೇಶನ ಮುಗಿದ ನಂತರ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಸ್ಪೀಕರ್ ಖಾದರ್, ಅಧಿವೇಶನ ಸುಗಮವಾಗಿ ನಡೆಯಿತು. 10 ದಿನಗಳ ಅಧಿವೇಶನದಲ್ಲಿ ಪ್ರಮುಖ ವಿಷಯಗಳ ಕುರಿತು ಹಲವಾರು ಚರ್ಚೆಗಳು ನಡೆದವು. ಉತ್ತರ ಕರ್ನಾಟಕ ಮತ್ತು ಬರ ಸೇರಿದಂತೆ ಹೆಚ್ಚಿನ ಚರ್ಚೆಗಳಲ್ಲಿ ಕನಿಷ್ಠ ಶೇಕಡಾ 80ರಷ್ಟು ಶಾಸಕರು ಭಾಗವಹಿಸಿದರು ಎಂದರು.
ಹಲವು ವಿಧೇಯಕಗಳು ಅಂಗೀಕಾರಗೊಂಡಿದ್ದು, ಎರಡು ಪ್ರಮುಖವಾದವು ಬೆಳಗಾವಿ, ಹುಬ್ಬಳ್ಳಿ, ವಿಜಯಪುರ ಮತ್ತು ಶಿವಮೊಗ್ಗದ ವಿಮಾನ ನಿಲ್ದಾಣಗಳಿಗೆ ನಾಮಕರಣ ಮತ್ತು ಇನ್ನೊಂದು ವಕೀಲರ ರಕ್ಷಣೆಗಾಗಿ ಎಂದು ಅವರು ಹೇಳಿದರು. ವಿಧಾನಮಂಡಲದ ಅಧಿವೇಶನ ಹೊರತುಪಡಿಸಿ ವರ್ಷದ ಬಹುತೇಕ ಭಾಗ ಖಾಲಿ ಇರುವ ಸುವರ್ಣ ವಿಧಾನಸೌಧವನ್ನು ಸದುಪಯೋಗಪಡಿಸಿಕೊಂಡು ವಿವಿಧ ಸೌಲಭ್ಯಗಳನ್ನು ಕಲ್ಪಿಸಿ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದರು.

0 Comments